ಕೆಟ್ಟುದನರಸ ಹೋಗಿ ತಾನೆ ಕೆಟ್ಟಿತ್ತು.


ಕಲ್ಯಾಣದ ಕತೆ ಒಂದು ಕಾಲದ ತುರ್ತಿನೊಂದಿಗೆ ಹೊಡೆದಾಡಿ ಕೊನೆಗೊಂಡದ್ದು-ಕೊನೆಗಾಣದೆ ಹಾಗೇ ಉಳಿದು ಬಂದದ್ದು ಆಚರಣೆಯ ನೆಪದಲ್ಲಿ… ಶ್ರೇಷ್ಠತೆಯ ವ್ಯಸನದಲ್ಲಿ… ಬದಲಾವಣೆಯ ಆಶಾವಾದದಲ್ಲಿ ಮಾತ್ರ. ಇತ್ತೀಚಿನ ವಚನಗಳ ಅಧ್ಯಯನದಲ್ಲಿ ಇಂದಿನ ಸಾಮಾಜಿಕ ಸಂದರ್ಭದ ವಿವರಣೆ ಯಾವ ಹಂತದಲ್ಲೂ ನುಣಚಿಕೊಳ್ಳುವುದಿಲ್ಲ. ನಾಟಕ ಬರಲಿ, ಕವಿತೆ ಬರೆಯಲಿ, ಕಾದಂಬರಿಯಾಗಲಿ ಅದರೊಳಗೆ ರಚನಾಕಾರನಿಗೆ ಗೊತ್ತಿಲ್ಲದ ಹಾಗೆ ತನ್ನ ವಿರುದ್ಧ ತಾನೇ ಬರೆದುಕೊಳ್ಳುವ ಗುಣವೊಂದು ಒಡಮೂಡುತ್ತಲೇ ಇರುತ್ತದೆ. ಆ ಸಮಾಜೋಧಾರ್ಮಿಕ ಚಳುವಳಿಯ ಭಕ್ತ ಮತ್ತು ಅವನ ಆರಾಧ್ಯ ದೈವ ಎದುರುಗೊಳ್ಳುವ ಕ್ರಿಯೆಯಲ್ಲಿ ವಚನದ ಸಾಲುಗಳು ನಿವೇದನೆಯ ರೂಪದಲ್ಲಿ ಆಕಾರಗೊಂಡಿವೆ. ಅಂಥ ವಚನಗಳು ಮತ್ತು ಆ ಕಾಲದ ಕಥನದ ಮೇಲೆ ರಚನೆಯಾದ ಸಾಹಿತ್ಯ ಕೃತಿಗಳು ಕರ್ನಾಟಕದ ಜಾತಿ ವ್ಯವಸ್ಥೆಗೆ ಯಾವ ರೀತಿಯಲ್ಲಿ ಸ್ಪಂದಿಸಿವೆ? ಮಠ ಎಂಬ ವ್ಯವಸ್ಥೆಯಲ್ಲಿ ಈಗಲೂ ಜಮೀನ್ದಾರಿ ನಡವಳಿಕೆಯನ್ನು, ಜಾತಿ ಶ್ರೇಷ್ಠತೆಯ ಗುಣಗಳನ್ನು, ಮೌಢ್ಯಗಳ ಜೀವಂತಿಕೆಯನ್ನು ಕಾಣುವ ನಮಗೆ ಕಲ್ಯಾಣದ ಕ್ರಾಂತಿ ಹಾಕಿಕೊಟ್ಟ ಬುನಾದಿ ಯಾವ ಮಾದರಿಯನ್ನು ಅನುಸರಿಸಿ ಪ್ರಾದೇಶಿಕತೆಯನ್ನು ಕಟ್ಟುತ್ತಿದೆ? ಎಂಬುದು ಮುಖ್ಯ ಪ್ರಶ್ನೆಯಾಗಿ ಕಾಡುತ್ತಿದೆ. ನನ್ನ ಊರಿನ ಲಿಂಗಾಯತರ ಮನೆಗಳಲ್ಲಿ ಬಸವಣ್ಣನವರ ಭಾವಚಿತ್ರಗಳು ಕಂಡಾಗಲೆಲ್ಲ ನನ್ನ ಜಾತಿ ಕಾಡುತ್ತದೆ ಆ ಬಸವನೆಂಬವನ ಹುಂಬ ಅನುಯಾಯಿಗಳಲ್ಲಿನ ಢಾಂಬಿಕ ಭಕ್ತಿಯ ತೆವಲು ಕಾಣುತ್ತದೆ. ಅಂಥದೇ ತೆವಲಾಗಿ ಇಂದಿಗೆ ನೂರು ವರ್ಷಗಳ ಹಿಂದೆ ಬಸವ ಜಯಂತಿಯನ್ನು ಆಚರಿಸಲು ಆರಂಭಿಸಿದರು. ಅದರ ಶತಮಾನೋತ್ಸವದ ಸಂಭ್ರಮ ಫೋಟೋಕ್ಕೆ ಹಾರ ತುರಾಯಿಗಳನ್ನು ಹಾಕುವುದರಲ್ಲಿ, ಆ ಕಾಲದ ದಿಟ್ಟ ನಡೆಯನ್ನ ಹಾಡಿ ಹೊಗಳುವುದರಲ್ಲಿ ಕಳೆಯುವ ಮಠಾಧೀಶರು ಕೆಟ್ಟ ಜಾತಿ ಸೂತಕವನ್ನ ಪ್ರೊತ್ಸಾಹಿಸುವವರಂತೆ ಕಾಣುತ್ತಾರೆ. ಕನ್ನಡ ನೆಲದಲ್ಲಿ ಅತಿ ಹೆಚ್ಚು ಜಾತ್ಯಾಧಾರಿತ ಜಗಳಗಳು ನಡೆದಿರುವುದು ಲಿಂಗಾಯತ ಮತ್ತು ಇತರೆ ಕೋಮಿನ ನಡುವೆ ಎಂಬುದು ಸ್ಪಷ್ಟ. ಬಸವಣ್ಣನವರ ಹೆಸರು ಹೇಳುತ್ತಲೇ ಹಿಂದುತ್ವವನ್ನ ಈ ನೆಲದಲ್ಲಿ ಬಿತ್ತುತ್ತಿರುವವರು ಅವನ ಅನುಯಾಯಿಗಳೇ ಎಂಬುದು ವಿಪರ್ಯಾಸ. ಕೆಲವು ಮಠಾಧೀಶರು ಈ ಎಲ್ಲ ಆಪಾದನೆಗೆ ಹೊರತಾಗಿ ಕೆಲಸ ಮಾಡುತ್ತಿದ್ದರೂ ಒಳಗೊಳಗೆ ಜಾತಿ ಮುಖಂಡರೊಂದಿಗೆ ಮುಖ ಕೆಡಿಸಿಕೊಂಡಿದ್ದಾರೆ, ಇನ್ನು ಕೆಲ ಮಠಾಧೀಶರು ಶ್ರೇಷ್ಠತೆಯ ಒಲವಿಗಾಗಿ ಸಮಾನತೆಯ ಸೋಗು ಹಾಕಿಕೊಂಡಿದ್ದಾರೆ. ದಲಿತರಿಗೆ ಬಹಿಷ್ಕಾರ ಹಾಕಿದ ಊರುಗಳ ಬಗ್ಗೆ ಪತ್ರಿಕೆಯಲ್ಲಿ ವರದಿ ನೋಡಿದವರಿಗೆ ತಿಳಿಯುತ್ತದೆ ಕರ್ಣಾಟಕದ ಈ ಪ್ರಬಲ ಕೋಮಿನ ಕುಹಕತನ…. ಹಾಗಾಗಿ ನಾವು ಮೇಲ್ಮಟ್ಟದಲ್ಲಿ ಬ್ರಾಹ್ಮಣರ ಅಂದಕಾಲತ್ತಿನ ರಾಜಕಾರಣವನ್ನ ಹೀಗಳೆಯುತ್ತ ಕಾಲ ಕಳೆಯುತ್ತಿದ್ದೆವೆ ಹೊರತು ಹೊಸ ಸಮುದಾಯದ ಅಟ್ಟಹಾಸವನ್ನ ಅಷ್ಟಾಗಿ ಗ್ರಹಿಸುತ್ತಿಲ್ಲ.
ಬಸವಣ್ಣನ ಹುಟ್ಟಿನ ಬಗ್ಗೆ, ಕಲ್ಯಾಣದ ಕ್ರಾಂತಿ ಬಗ್ಗೆ ಕೊಂಚ ವಿಚಕ್ಷಣ ದೃಷ್ಟಿ ಹರಿಸಿದ ಯಾವದೇ ಲೇಖಕ ಬಹಿಷ್ಕಾರವೆಂಬ ಅಟ್ಟಹಾಸದ ರಾಜಕೀಯ ಬಿಸಿಗೆ ತಾಗಿ ಸುಮ್ಮನಾಗಿದ್ದಾನೆ. ಮಹಾಚೈತ್ರ, ಆನುದೇವಾ ಕೃತಿಗಳು ಮುಟ್ಟುಗೋಲಾದ ಮೇಲಂತೂ ಆ ಸಮುದಾಯ ಇತಿಹಾಸದ ಮೇಲೆ ವಿಚಿತ್ರ ತೆರನಾದ ಹಿಡಿತ ಸಾಧಿಸುತ್ತಿದೆ. ವಚನದ ಆಶಯದಂತೆ ಅವರ ನಡೆ ಇಲ್ಲ ಎಂಬುದನ್ನು ನಾವು ಮೈಸೂರಿನ ಮರ್ಯಾದಾ ಹತ್ಯ ರಾಣೆಬೆನ್ನೂರಿನ ಘಟನೆಯಿಂದ ತಿಳಿಯಲಾರದವರಾಗಿದ್ದೇವೆ. ನಮ್ಮ ಜಾತಿಯವನು ಒಬ್ಬ ಶರಣನಿದ್ದ ಅವನು ಬಸವಣ್ಣನವರ ಆಪ್ತ ಹಡಪದಪ್ಪಣ್ಣನೆಂದು. ಆದರೆ ನಮ್ಮೂರಿನ ಲಿಂಗಾಯತರು ನಮ್ಮನ್ನು ಈಗಲೂ ಬೇಲಿಯೊಳಗಣ ಅಸ್ಪೃಶ್ಯರ ಹಾಗೆ ನಡೆಸಿಕೊಳ್ಳುವಾಗ ನನಗನ್ನಿಸುತ್ತದೆ…’ನಾವು ಊರ ಹೊರಗಿದ್ದರೆ ಎಷ್ಟೊ ಪಾಡಿತ್ತು’ ಎಂದು. ಸ್ವಾಭಿಮಾನವಿಲ್ಲದ ಸಣ್ಣ ಸಮುದಾಯದವರಾದ ನಾವು ಸಂಘಟಿತರಾಗುವುದು ಕನಸಿನ ಮಾತು. ಇವತ್ತಿಗಂತು ಈ ಸಣ್ಣ-ಪುಟ್ಟ ಸಮುದಾಯಗಳು ಸಂಘಟಿತರಾಗುವುದು ಕೆಟ್ಟ ರಾಜಕಾರಣದ ಸಹವಾಸವನ್ನ ಬಯಸಿಯೇ ಎಂಬುದನ್ನು ಕಾಣುತ್ತಿದ್ದೇವೆ… ಹೀಗಿರುವಾಗ ಕನ್ನಡದ ಬುದ್ದಿಜೀವಿಗಳು ಸ್ವಲ್ಪ ಈ ತೆರನಾದ ಮುಸುಕಿನ ರಾಜಕಾರಣವನ್ನು ಬಿಡಿಸಿ ನೋಡಲು ಸಾಧ್ಯವಾಗಲಾರದೆ ಹೋಗಿರುವುದು ನೋವಿನ ಸಂಗತಿ…. ಹಾಗೇ ಸಮುದಾಯ ಪ್ರಜ್ಞೆಯನ್ನು ನೊಡುವ ತೀಕ್ಷ್ಣ ದೃಷ್ಟಿ ದಕ್ಷಿಣ ಕನ್ನಡದ ನೆಲದಲ್ಲಿ ಬಂದ ಹಾಗೆ ನಮ್ಮ ನಾಡಿನ ಬೇರೆ ಯಾವ ಪ್ರಾಂತದಲ್ಲೂ ಹುಟ್ಟಿಕೊಳ್ಳಲಿಲ್ಲ ಯಾಕೆ ? ಅಲ್ಲಿನ ಮತ್ತು ಬಯಲು ಸೀಮೆ ಬದುಕಿನ ಎರಡು ವಲಯಗಳನ್ನು ಕನ್ನಡ ಮನಸ್ಸನ್ನು ಕಟ್ಟಲೂ ಈ ಸಾಂಸ್ಕೃತಿ ವೈಪರಿತ್ಯ ಕಾರಣವಿದ್ದಿರಬಹುದು
ಮುಂದೆ ಬರೆಯಲು ಮನಸ್ಸಾಗಲಿಲ್ಲ. ಕ್ಷಮಿಸಿ.
—-ಅಮಾಸ

ನಿಮ್ಮ ಟಿಪ್ಪಣಿ ಬರೆಯಿರಿ